ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಎಸ್‌ಐಟಿಯಿಂದ ಮತ್ತೆ 10 ಕೋಟಿ ರೂ. ಜಪ್ತಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರೋಪಿಗಳಿಂದ 14 ಕೋಟಿ ನಗದು, ಬ್ಯಾಂಕ್ ನಲ್ಲಿ 10 ಕೋಟಿ ರು. ಹಾಗೂ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳು ಸೇರಿದಂತೆ ಒಟ್ಟು 28 ಕೋಟಿ ರು. ಅನ್ನು ಎಸ್ಐಟಿ ಜಪ್ತಿ ಮಾಡಿದೆ. ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಅಕ್ರಮವಾಗಿ ವರ್ಗಾವಣೆಯಾಗಿದ್ದ ವಿವಿಧ ಬ್ಯಾಂಕ್ ಖಾತೆಗಳಿಂದ ಮತ್ತೆ 10 ಕೋಟಿ ರೂ. ಜಪ್ತಿ ಮಾಡಿದೆ.ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರೋಪಿಗಳಿಂದ 14 ಕೋಟಿ ನಗದು, ಬ್ಯಾಂಕ್ ನಲ್ಲಿ 10 ಕೋಟಿ ರು. ಹಾಗೂ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳು ಸೇರಿದಂತೆ ಒಟ್ಟು 28 ಕೋಟಿ ರು. ಅನ್ನು ಎಸ್ಐಟಿ ಜಪ್ತಿ ಮಾಡಿದೆ.193 ಬ್ಯಾಂಕ್ ಖಾತೆಗಳಿಂದ 28 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ವಂಚನೆಯ ಮೊತ್ತವನ್ನು ಹೈದರಾಬಾದ್ ಮತ್ತು ಬೆಂಗಳೂರಿನ ಬಾರ್‌ಗಳು, ಹೋಟೆಲ್‌ಗಳು, ಆಭರಣ ಅಂಗಡಿಗಳು ಮತ್ತು ಐಟಿ ಕಂಪನಿಗಳ ಮಾಲೀಕರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದ್ದ ಹಣವನ್ನು ಜಪ್ತಿ ಮಾಡಲಾಗಿದೆ.ಬೆಂಗಳೂರು ಮೂಲದ ಖಾಸಗಿ ಕಂಪನಿಗಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ನಿಗಮದ ಹಣವನ್ನು ಈ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದೆ.14 ನಕಲಿ ಖಾತೆಗಳನ್ನು ಸೃಷ್ಟಿಸಿದ್ದ ಮತ್ತೊಬ್ಬ ಆರೋಪಿ ಶ್ರೀನಿವಾಸ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.ವಾಲ್ಮೀಕಿ ನಿಗಮದಿಂದ ತಮ್ಮ ಸಹಕಾರಿ ಬ್ಯಾಂಕ್‌ಗೆ ಹಣ ವನ್ನು ವರ್ಗಾಯಿಸಿದ್ದ ಹೈದರಾಬಾದ್ ಗ್ಯಾಂಗ್, ಬಳಿಕ ಆ ಸಹಕಾರಿ ಬ್ಯಾಂಕ್‌ನಿಂದ ಬಾರ್‌ಗಳು, ಚಿನ್ನಾಭರಣ ಮಾರಾಟ ಮಳಿಗೆಗಳು, ಕೆಲ ಐಟಿ ಕಂಪನಿಗಳು ಹಾಗೂ ಹೋಟೆಲ್ ಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ನಗದು ಮಾಡಿಕೊಂಡಿತ್ತು. ಹೀಗೆ ಹೈದರಾಬಾದ್ ಗ್ಯಾಂಗ್‌ನಿಂದ ವರ್ಗಾವಣೆಯಾಗಿದ್ದ ಹಣದಲ್ಲಿ 10 ಕೋಟಿ ರು.ಗಳನ್ನು 193ಕ್ಕೂ ಹೆಚ್ಚು ವಿವಿಧ ಬ್ಯಾಂಕ್ ಖಾತೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.